ಕೋಮಲ್ ಅಭಿನಯದ "ನಮೋ ಭೂತಾತ್ಮ 2 " ಚಿತ್ರವು ಯಶಸ್ವಿಯಾಗಿ 25 ನೇ ದಿನದತ್ತ ಹೆಜ್ಜೆ ಹಾಕುತ್ತಿದೆ. ಆಗಸ್ಟ್ ೦೪ರಂದು ಬಿಡುಗಡೆಯಾದ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚುವುದರ ಜೊತೆಗೆ ಪರಭಾಷಾ ಚಿತ್ರಗಳ ಪೈಪೋಟಿಯ ನಡುವೆಯೂ ಚಿತ್ರವು 25 ದಿನಗಳನ್ನು ಪೂರೈಸಿರುವ ಹರ್ಷ ಚಿತ್ರತಂಡಕ್ಕಿದೆ.
ಇದು ಕನ್ನಡ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ನಿರ್ದೇಶನದ ಎರಡನೆಯ ಚಿತ್ರ. ಇದಕ್ಕೂ ಮೊದಲು ಅವರು ಹಲವು ವರ್ಷಗಳ ಹಿಂದೆ ಕೋಮಲ್ ಅಭಿನಯದ "ನಮೋ ಭೂತಾತ್ಮ" ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದೊಂದು ರೀಮೇಕ್ ಚಿತ್ರವಾಗಿತ್ತು. ಈಗ "ನಮೋ ಭೂತಾತ್ಮ ೨" ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಕುರಿತು ಮಾತನಾಡುವ ಅವರು, ಚಿತ್ರವು 25 ದಿನಗಳ ಕಾಲ ಯಶಸ್ವಿ ಪ್ರದರ್ಶನವನ್ನು ಕಂಡಿದೆ. ಕೋವಿಡ್ ಸಂದರ್ಭದಲ್ಲಿ ಈ ಕಥೆಯನ್ನು ಮಾಡಿಟ್ಟುಕೊಂಡಿದ್ದೆ. ಕಳೆದ ವರ್ಷ ಇದೇ ಸಮಯಕ್ಕೆ ಚಿತ್ರದ ತಯಾರಿ ಶುರುವಾಯಿತು. ಈ ವರ್ಷ ಆಗಸ್ಟ್ ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಚಿತ್ರ ನೋಡಿದವರೆಲ್ಲ ಮೆಚ್ಚಿಕೊಂದ್ದಾರೆ. ನಗಿಸುತ್ತಾ, ಹೆದರಿಸುತ್ತಾ ಇಂದು ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದು ಜನರಿಗೆ ಮೆಚ್ಚುಗೆಯಾಗಿದೆ. ಅದರಲ್ಲೂ ಚಿತ್ರದ ದ್ವಿತೀಯಾರ್ಧ ಮತ್ತು ಕ್ಲೈಮ್ಯಾಕ್ಸ್ ಭಾಗವನ್ನು ಎಲ್ಲರೂ ಬಹಳವಾಗಿ ಮೆಚ್ಚಿಕೊಂಡಿದ್ದಾರೆ ಎನ್ನುತ್ತಾರೆ ಮುರಳಿ.
ಬಹುಶಃ ಪರಭಾಷೆಗಳ ದೊಡ್ಡ ಚಿತ್ರಗಳ ಪೈಪೋಟಿ ಇಲ್ಲದಿದ್ದರೆ ಚಿತ್ರ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು ಎನ್ನುವ ಅವರು, ಆಗಸ್ಟ್ ನಾಲ್ಕರಂದು ಯಾವ ಚಿತ್ರವೂ ಬಿಡುಗಡೆ ಇರಲಿಲ್ಲ ಎಂಬ ಕಾರಣಕ್ಕೆ ಆ ವಾರ ಚಿತ್ರ ಬಿಡುಗಡೆ ಪ್ಲಾನ್ ಮಾಡಿದೆವು. ಆದರೆ, ಅದರ ಮರುವಾರ ಜೈಲರ್ ಸೇರಿದಂತೆ ನಾಲ್ಕು ದೊಡ್ಡ ಪರಭಾಷಾ ಚಿತ್ರಗಳು ಬಿಡುಗಡೆಯಾದವು. ಇದರಿಂದ ನಮಗೆ ಚಿತ್ರಮಂದಿರಗಳ ಸಮಸ್ಯೆ ಎದುರಾಯಿತು. ನಮಗೆ ಚಿತ್ರ ನಿರ್ಮಾಣ ಹೊಸದು. ಯಾವುದಕ್ಕೂ ರಾಜಿ ಆಗದೆ ಚಿತ್ರಕ್ಕೆ ಏನು ಬೇಕೋ ಅದನ್ನೆಲ್ಲ ಪೂರೈಸಿ, ಒಂದು ಹೊಸ ತಂಡ ಕಟ್ಟಿಕೊಂಡು ಈ ಚಿತ್ರ ಮಾಡಿದ್ದೇವೆ. ಚಿತ್ರ ನೋಡಿದವರೆಲ್ಲ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಒಂದು ಸ್ವಂತ ಪ್ರಯತ್ನಕ್ನೆ ಸಿಕ್ಕ ಪ್ರೋತ್ಸಾಹದಿಂದ ಇನ್ನಷ್ಟು ಏನಾದರೂ ಮಾಡುವ ಹುಮ್ಮಸ್ಸು ಬಂದಿದೆ ಎನ್ನುತ್ತಾರೆ.
ಸದ್ಯ ಮುರಳಿ ಅವರ ಬಳಿ ಇನ್ನೂ ಮೂರು ಕಥೆಗಳಿವೆಯಂತೆ. ನಮೋ ಭೂತಾತ್ಮ ೨ ಚಿತ್ರದ ಕೊನೆಯಲ್ಲಿ ಚಿತ್ರ ಮುಂದುವರೆಯುತ್ತದೆ ಎಂಬ ವಿಷಯ ಗೊತ್ತಾಗುತ್ತದೆ. ನಮೋ ಭೂತಾತ್ಮ ೩ ಮಾಡುವ ಯೋಚನೆ ಇದೆ. ಆದರೆ, ಸದ್ಯಕ್ಕಿಲ್ಲ. ಒಂದು ವರ್ಷದ ನಂತರ ಮಾಡುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಇನ್ನೂ ಮೂರು ಕಥೆಗಳಿವೆ. ಎಲ್ಲಾ ವಿಭಿನ್ನ ಕಥೆಗಳು. ಈ ಪೈಕಿ ಒಂದು ಚಿತ್ರದ ಕೆಲಸಗಳು ಮುಂದಿನ ತಿಂಗಳಿನಿಂದ ಶುರುವಾಗುವ ಸಾಧ್ಯತೆ ಇದೆ ಎನ್ನುತ್ತಾರೆ.
ಕನ್ನಡ ಚಿತ್ರರಂಗಕ್ಕೆ ನೃತ್ಯಪಟುವಾಗಿ ಬಂದ ಮುರಳಿ, ಯಶವಂತ್ ಚಿತ್ರದ ಮೂಲಕ ನೃತ್ಯ ನಿರ್ದೇಶಕರಾದರು. ಅಲ್ಲಿಂದ ಇಲ್ಲಿಯವರೆಗೂ ೬೦೦ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಪುನೀತ್, ಗಣೇಶ್, ಯಶ್, ಸುದೀಪ್, ದರ್ಶನ್, ಶರಣ್, ಧ್ರುವ ಸರ್ಜಾ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲ ಕನಪ್ರಿಯ ಹೀರೋಗಳಿಗೆ ನೃತ್ಯ ಹೇಳಿಕೊಟ್ಟಿದ್ದಾರೆ.